ಬೆಳಕೆ

ಜಗದಗಲ ಹಣೆಬಡೆದ
ಹಿತ್ತಾಳೆ ಮೊಗದೊಡೆಯ
ಮುಚ್ಚುಕಂಗಳ ಸಂತ
ನಿರ್ಲಿಪ್ತ ಜಂಗಮನೆ
ಧ್ಯಾನಸ್ತ ಅಲ್ಲಮನೆ?
ಪ್ರಶಾಂತ
ಅಭಯಂಕರ
ಶಿವನೆ?
ಹಣೆಗಣ್ಣಲ್ಲ
ಜ್ಞಾನದ ಬೆಳಕಿಂಡಿ
ಹಣೆಯ ಛೇದಿಸಿ
ಯಜ್ಞಕುಂಡವ ಹೂಡಿ
ಬೆಳಕ ಸೂಸುವ
ಅಘೋರಿಯೆ
ಮಹಾ ಮಹಿಮನೆ
ಈ ಫ಼ೋಟೊ ಯಾವುದೋ ಕಾಲದಲ್ಲಿ ನನ್ನ ಸಂಚಾರಿ ಫ಼ೋನಿನಲ್ಲಿ ಹೇಗೋ ಸೇರಿಕೊಂಡಿತ್ತು. ಇದು ಏನೆಂದು ಗೊತ್ತಿಲ್ಲ. ಏನೋ ಮಾಡಲು ಹೋದಾಗ ಆನುಷಂಗಿಕವಾಗಿ ಸೆರೆಯಾಗಿರಲಿಕ್ಕೆ ಸಾಕು. ಆದರೆ ಅದನ್ನು ನೋಡಿ ನನಗ ಏನೇನೋ ಅನ್ನಿಸಿತ್ತು. ಅದು ಈ ಪದ್ಯವಾಗಿ ಪರಿಣಮಿಸಿತ್ತು. ಬಹಳ ಮೊದಲೊಮ್ಮೆ ಈ ಬ್ಲಾಗಿನಲ್ಲಿ ಇದನ್ನು ಹಾಕಿದ್ದೆ. ಯಾಕೋ ಇದು ನೆನಪಾಗಿದ್ದಕ್ಕೂ ನನಗೆ ಸದ್ಯಕ್ಕೆ ಬರೆಯುವ ಲಹರಿಯಿಲ್ಲದಿರುವುದಕ್ಕೂ, ಒಟ್ಟು ಇದನ್ನು ಮತ್ತೆ ಇಲ್ಲಿ ಹಾಕುತ್ತಿದ್ದೇನೆ.
ತುಣುಕುಗಳು
ಬಹಳ ದಿನದಿಂದ ಏನೂ ಬರೆದೇ ಇಲ್ಲ. ತಂಗಳಿನ ಈ ತುಣುಕುಗಳಾದರೂ ಸರಿಯೇ.
ಮಳೆ ಸುರಿಯುತ್ತದೆ
ನೆನಪು ಕನಸುಗಳ
ಕಲಸುಮೇಲೋಗರದಲಿ
ವಾಸ್ತವ ಕರಗುತ್ತದೆ
***
ಮಳೆಬಿಲ್ಲು ನೋಡಿ ವಿಸ್ಮಯಪಡುತ್ತೇನೆ
ನೀರಹನಿಯೊಂದು ಸೂರ್ಯನನ್ನೇ
ಒಡೆಯುವ ಬಗೆಯೆಂತು!
ನಿನ್ನ ನೆನಪಾಗುತ್ತದೆ
ನಿನ್ನ ಕಣ್ಹನಿ ನನ್ನ
ಜೀವವ ಕೆದರಿ ನಿರ್ವರ್ಣ
ಮಾಡುವ ಬಗೆಯ ಅರಿವಾಗಿ
ಮಳೆಬಿಲ್ಲಿನ ಅದ್ಭುತವ ಮರೆಮಾಚುತ್ತದೆ.
***
ನಿರುಮ್ಮಳ ನಿದ್ದೆಯುದ್ದಕ್ಕೂ ಕನಸು ಕಂಡೆ
ಅಥವಾ ಬಹಳ ಮಾಡಿ
ನಿರುಮ್ಮಳ ಕನಸಿನುದ್ದಕ್ಕೂ ನಿದ್ದೆ ಕಂಡೆ
ವಾಸ್ತವ ಎಚ್ಚರ ಮಾಡಿತು.
ಗೊಂದಲ ಮಾತಾಡತೊಡಗಿತು.
***
ಚೈತನ್ಯ ಧನವಾಗಿ ಬದಲುವ ಈ
ಸ್ಥಾವರದ ಬಳಿ ಕೂತಿದ್ದೇನೆ.
ನನ್ನ ಉರಿ ಹಂಬಲಗಳ ಹೊಗೆ
ರಸ್ತೆಯ ಮುಸುಕುವ ಅವಿರತ ಕರಿ
ಕಂಬಳಿಯ ಎರಗುತ್ತದೆ.
ನೆನಪುಗಳ ಆವಾಹಿಸಿಕೊಳ್ಳುತ್ತೇನೆ
ನಿಶ್ವಾಸಗಳ ಮೂಲಕ ನೆಯ್ಯುತ್ತೇನೆ
ಕಂಬಳಿಯ ತಳಕ್ಕೂ ಒಯ್ಯುತ್ತೇನೆ
ಅಚಾನಕ್ಕಿನ ಟ್ರಕ್ಕಿನ ತುಳಿತಕ್ಕೆ
ಸಿಲುಕಿ ಹಿಪ್ಪೆಯಾಗಲೆಂದು ಕಾಯುತ್ತೇನೆ.
ಅದೃಶ್ಯ ಸೋಸಕವೊಂದು ಬಲಿಷ್ಠ
ಎದುರಾಳಿಯಾಗಿ ಕಾಡುತ್ತದೆ,
ನೆನಪುಗಳ ನೆಯ್ದು ಹಂಬಲಗಳಾಗಿಸುತ್ತದೆ
ಶ್ವಾಸದ ಮೂಲಕ ಮತ್ತೆ
ನನ್ನೊಳಗೆ ತಳ್ಳುತ್ತದೆ.
ಸ್ಥಾವರದತ್ತ ನೋಡುತ್ತ ಶೋಕಿಸುತ್ತೇನೆ
ಮನಗಾಣುತ್ತೇನೆಯೆ?
ಇದೊಂದು ವಿಷವರ್ತುಳವೆಂದು
ಅಥವಾ
ಮತ್ತೂ ಆಶಿಸುತ್ತೇನೆಯೆ?
***
ಹಸಿ ನೆನಪುಗಳು ಒಣಗುವುದಿಲ್ಲ
ಒಣಗಿಸುವುದನ್ನು ಒಣಗಿಸುತ್ತವೆ
ಮೋರಿಯನ್ನು ಸೋರಿಸುತ್ತವೆ
ಕವಿಯನ್ನು ರಮಿಸುವ ಸೋಗು ಹಾಕುತ್ತವೆ.
ಹಂಬಲಗಳೇ ಮೇಲು
ಸದಾಕಾಲ ಉರಿಯುತ್ತವೆ
ನೆನಪುಗಳನ್ನೂ ಸುಡುತ್ತವೇನೋ
ಆದರೆ ಅವನ್ನು ನಂದಿಸಲಾಗುತ್ತದೆ
ಅಥವಾ ಆಗಿಂದಾಗ ಉರಿದು ಹೋಗುತ್ತವೆ.
ಸಂರಕ್ಷಕನೆ:
ಬಾ. ಕೂತುಕೊಳ್ಳು. ನೀನು ರಕ್ಷಿಸುತ್ತಿರುವುದು ಸಂಸ್ಕೃತಿಯನ್ನೋ, ಧರ್ಮವನ್ನೋ, ಭಾಷೆಯನ್ನೋ, ಅಥವಾ ಮತ್ತೇನೇ ಇರಲಿ. ಬಾ. ಮಾತಾಡೋಣ. ಅಲ್ಲ, ಈ ದಿನ ನಾನು ಮಾತಾಡುತ್ತೇನೆ, ನೀನು ಕೇಳು; ನಿನ್ನ ಮಾತುಗಳನ್ನು ಸಾಕಷ್ಟು ಕೇಳಿದ್ದೇನೆ, ಕೆಲಸಗಳನ್ನು ಸಾಕಷ್ಟು ನೋಡಿದ್ದೇನೆ. ನಿನ್ನ ದನಿ ಜೋರು, ಕೆಲಸಗಳೂ ಎದ್ದುಕಾಣುವಂಥವು. ನನ್ನಲ್ಲಿ ಆ ಕುವ್ವತ್ತಿಲ್ಲ. ನನ್ನ ಸಣ್ಣದನಿಯನ್ನೂ ಸ್ವಲ್ಪ ಕೇಳು.
(more…)
ಸಂಸ್ಕೃತಿ ಸಂರಕ್ಷಣೆ – ೧೦೧
ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ ಅತ್ಯಂತ ಸುಲಭ ಹಾಗೂ ಪರಿಣಾಮಕಾರಿ ದಾರಿ ಯಾವುದು?
- ನಮ್ಮ ಸಂಕುಚಿತ ದೃಷ್ಟಿಕೋನಕ್ಕೆ ಹೊಂದುವಂತೆ ಅನುಮತಿಯಿರುವಂಥ ನಡವಳಿಕೆಗಳ ಸಣ್ಣ ಪಟ್ಟಿಯೊಂದನ್ನು ತಯಾರಿಸುವುದು.
- ಕಂಡಕಂಡಲ್ಲಿ, ಕಂಡಕಂಡವರೆದುರಿಗೆ ಅದನ್ನು ಸಾರುವುದು. ಅದೇ ಮೂಲಭೂತ ಸತ್ಯವೆಂದು ಅಬ್ಬರಿಸುವುದು.
- ಆ ಪಟ್ಟಿಯಲ್ಲಿಲ್ಲದುದನ್ನು ಯಾರಾದರೂ ಮಾಡಿದರೆ ಅಪಚಾರವಾಯಿತೆಂದು ಹುಯಿಲಿಡುವುದು. ಹೋಗಿ ಅಂಥವರನ್ನು ಸದೆಬಡೆಯುವುದು.
- ನಂತರ ತಾವು ಮಾಡಿದ್ದು ಶ್ರೇಷ್ಠ ಎಂದು ಹೆಮ್ಮೆಯಿಂದ ಸಾರುವುದು. ಸಂರಕ್ಷಣೆಯ ಹೊಣೆ/ಶ್ರೇಯಕ್ಕಾಗಿ ಹಪಾಪಿಸುವುದು.
ಸಂಸ್ಕೃತಿಯ ಜಾಗದಲ್ಲಿ ಭಾಷೆ, ಧರ್ಮ, ಜಾತಿ, ಸಿದ್ಧಾಂತ ಹೀಗೆ ಮತ್ತೇನು ಬೇಕಾದರೂ ಹಾಕಿ ಓದಿಕೊಳ್ಳಿ.
ದೋಷವಲ್ಲ, ವೈಶಿಷ್ಟ್ಯ
ಅನೇಕ ಸಲ ಒಂದು ಕಲಾಕೃತಿಯ ಮಹತ್ವ ತನ್ನಿಂದ ತಾನೇ ಎದ್ದು ಕಾಣದೆ, ಅದರ ವಿಮರ್ಶೆ/ವಿಶ್ಲೇಷಣೆಯಿಂದ ಹೊರಬರುತ್ತದೆ. ಹಾಗೆಯೇ, ಸಾಕಷ್ಟು ಸಲ ರೂಪಾಂತರ/ಅಳವಡಿಕೆಗಳೂ ಕಲಾಕೃತಿಗಳ ಮಹತ್ವವನ್ನು ಹೆಚ್ಚಿಸುತ್ತವೆ. ಸಾಧಾರಣ ಕೃತಿಗಳನ್ನೂ ಉತ್ತಮ ವ್ಯಾಖ್ಯಾನ ಅಥವಾ ಅಳವಡಿಕೆಗಳ ಮೂಲಕ ಮಹತ್ವದ್ದೆಂದು ತೋರುವಂತೆ ಮಾಡಬಹುದು. ಅನೇಕ ಉದಾಹರಣೆಗಳನ್ನು ಕೊಡಬಹುದು, ಆದರೆ ತಕ್ಷಣಕ್ಕೆ ನನ್ನ ಮನಸ್ಸಿಗೆ ಬರುತ್ತಿರುವುದು ಕೊಪ್ಪೋಲಾನ ಗಾಡ್ಫ಼ಾದರ್ ಸಿನೆಮಾ. ಮಾರಿಯೋ ಪುಝೋನ ಸಾಧಾರಣ ಕಾದಂಬರಿಯನ್ನು ತೊಗೊಂಡು (ನಾನು ಅದನ್ನು ಓದಿಲ್ಲ, ಕೇಳಿ ಗೊತ್ತಷ್ಟೆ) ಒಂದು ಪ್ರಬಲ ಸಿನೆಮಾವನ್ನು ಕೊಪ್ಪೋಲಾ ತಯಾರಿಸಿದ. ವ್ಯತಿರಿಕ್ತ ಉದಾಹರಣೆಗಳೂ ಸಾಕಷ್ಟು ಇವೆ. ಆದರೆ ಸದ್ಯಕ್ಕೆ ಅವುಗಳ ಅವಶ್ಯಕತೆಯಿಲ್ಲ.
ಇಷ್ಟೆಲ್ಲ ದೊಡ್ಡ ದೊಡ್ಡ ಫಾಲ್ತೂ ಮಾತುಗಳನ್ನು ಯಾಕೆ ಆಡಿದೆ ಎಂದರೆ… ಕೆಳಗಿನ ಪೇಂಟಿಂಗ್ ನೋಡಿ. ಅಂಥ ವಿಶೇಷ ಪೇಂಟಿಂಗ್ ಏನಲ್ಲ. ಟಾಯಮ್ಪಾಸ್ ಆಗದಿದ್ದಾಗ ಎಸ್ ತನ್ನ ಲ್ಯಾಪ್ಟಾಪಿನಲ್ಲಿ ಇಂಥವನ್ನು ಮಾಡುತ್ತಿರುತ್ತಾಳೆ.
(more…)
ಒಂದೆರಡು ಮಾತು
ಬಾಂಬೆಯ ನಂತರದ ದಿನಗಳಲ್ಲಿ ಅದರ ಕುರಿತು ಮತ್ತೊಂದೆರಡು ಪೋಸ್ಟುಗಳನ್ನು ಅರೆಬರೆ ಬರೆದಿಟ್ಟಿದ್ದೆ. ಆದರೆ ಅವನ್ನು ಮುಗಿಸಿ ಬ್ಲಾಗಿನಲ್ಲಿ ಹಾಕುವ ಉತ್ಸಾಹವಿಲ್ಲ. ಈಗಾಗಲೇ ಸಾಕಷ್ಟು ಮಾತುಗಳನ್ನು ಸಾಕಷ್ಟು ಜನ ಆಡಿದ್ದಾರೆ. ಕೆಲವರು ಕೆಲ ಮುಂದಿನ ಹೆಜ್ಜೆಗಳನ್ನೂ ಇಟ್ಟಿದ್ದಾರೆ. ನಾನು ಹೇಳುವುದು ಇಷ್ಟೇ. ನಾವು ಬ್ಲಾಗಿಗರು ಸಾಮಾನ್ಯವಾಗಿ ಉಳಿದವರಿಗಿಂತ ಹೆಚ್ಚು ಸವಲತ್ತುಗಳುಳ್ಳವರು. ಆರ್ಥಿಕವಾಗಿ ಅಥವಾ ಬುದ್ಧಿಶಕ್ತಿಯಿಂದ ಎಂದೇ ಅಥವಾ ಎಂದಷ್ಟೇ ಅಲ್ಲ. ಇದು ಮಾಹಿತಿ ಯುಗ. ಈ ನುಡಿ ಸವಕಲೆಂದು ತೋರಿದರೂ ಅದು ನಿಜವೆನ್ನುವುದರಲ್ಲಿ ಸಂಶಯವಿಲ್ಲ. Information is power. ನಮಗೆ ಮಾಹಿತಿ ಸಿಗುವುದು ಸುಲಭ ಸಾಧ್ಯ. ಹಾಗೆಯೇ ಮಾಹಿತಿ ಹರಡುವುದೂ. ವಾಡಿಕೆಯ ಹೇಳಿಕೆಯಂತೆ, ಇದೆಲ್ಲ ಒಂದೇ ಕ್ಲಿಕ್ಕಿನ ಅಂತರದಲ್ಲಿದೆ. ಇಂಥ ಪ್ರಬಲ ಮಾಧ್ಯಮದ ಸಾಧ್ಯತೆಗಳು ಅನೇಕ. ಉಪಯುಕ್ತ ಮಾಹಿತಿಯನ್ನು ಹರಡುವುದು ಎಷ್ಟು ಸುಲಭವೋ, ಅಷ್ಟೇ ಸುಲಭ ಗುಲ್ಲುಗಳನ್ನು, ತಪ್ಪು/ಉದ್ರೇಕಕಾರಿ ಸಂದೇಶಗಳನ್ನು ಹರಡುವುದು. ನಮ್ಮ ಸವಲತ್ತುಗಳನ್ನು ಪ್ರಭುದ್ದತೆಯಿಂದ ಬಳಸೋಣ.
ಇಂಥ ಒಂದು ದಿನದಂದು…
ಕಳೆದ ೧೨-೧೮ ತಿಂಗಳಲ್ಲಿ ಲೆಕ್ಕವಿಲ್ಲದಷ್ಟು ಸ್ಫೋಟಗಳು ನಡೆದಿವೆ. ಎಲ್ಲೋ ಒಮ್ಮೆ ಓದಿದ್ದಂತೆ, ಪ್ರತಿ ೬ ವಾರಕ್ಕೊಮ್ಮೆ ತಪ್ಪದೇ ಯಾವುದಾದರೂ ಒಂದು ನಗರದಲ್ಲಿ ಬಾಂಬುಗಳು ಸಿಡಿಯುತ್ತಿವೆ, ಜೀವಗಳು ಹೋಗುತ್ತಿವೆ. ನಾನು ದೂರದಲ್ಲಿರುವುದು ಹತಾಶೆಯ ಭಾವವನ್ನು ಇನ್ನಷ್ಟು ಹೆಚ್ಚಿಸುತ್ತದೆ, ಪ್ರತಿ ಸಲವೂ. ಆದರೆ ಮೊನ್ನೆ ೨೬ನೇ ತಾರೀಖು ಮಧ್ಯಾಹ್ನ (ಭಾರತದಲ್ಲಿ ಮಧ್ಯರಾತ್ರಿ) ನನ್ನ ಮನಸ್ಸಿನ ಭಾವ ಹಿಂದೆಂದಿನದಕ್ಕಿಂತ ತುಂಬ ಭಿನ್ನವಾಗಿತ್ತು. ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳು ನಮ್ಮೆಲ್ಲರ ದಿನಚರಿಯ ಅಂಗವಾಗಿಬಿಟ್ಟಿವೆ. ಆದರೆ ಈ ಸಲದ್ದು ಕೊಟ್ಟ ಆಘಾತ ಮಾತ್ರ ಎಣೆಯಿಲ್ಲದ್ದು. ನಮ್ಮ ಮನೆ, ಊರು, ದೇಶದ ಬಹುತೇಕ ಮಂದಿ ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದಾಗ ನಡೆಯುತ್ತಿದ್ದ ಅತಿಕ್ರಮಣವನ್ನು ಸುದ್ದಿಯಲ್ಲಿ ಓದುತ್ತ, ನೋಡುತ್ತ ಕಂಗಾಲಾಗಿ ಕೂತಿದ್ದೆ. ಬಾಂಬೆಯಂಥ ಒಂದು ಬೃಹತ್ ನಗರವನ್ನು ಒಂದಷ್ಟು ಅಮಾನುಷ ಯುವಕರು ತೆಕ್ಕೆಗೆ ತೆಗೆದುಕೊಂಡು ಅಟ್ಟಹಾಸಗೈಯುತ್ತಿದ್ದ ದೃಶ್ಯಗಳು ನಂಬಲಸಾಧ್ಯವಾದುವಾಗಿದ್ದುವು. ಲ್ಯಾಬ್ನಲ್ಲಿ ಕಂಪ್ಯೂಟರ್ ಮುಂದೆ ಕೂತು ನೋಡನೋಡುತ್ತಿದ್ದಂತೆ ೪ ಸಾವು ಎಂಬುದು ೮೦ ಸಾವು ಎಂದು ಬದಲಾಗಿದ್ದನ್ನು ಕಂಡು, ಸದ್ಯಕ್ಕೆ ಇದು ಮುಗಿದರೆ ಸಾಕು ಎಂದು ಕೈಚೆಲ್ಲಿದ್ದೆ.
(more…)
ಧ್ರುಪದ
ನನ್ನ ಜೀಮೇಲ್ನ ಅಂಚೆಡಬ್ಬಿಯಲ್ಲಿ ಕೆಲವು ಹಳೆಯ ಪತ್ರಗಳನ್ನು ಹುಡುಕುತ್ತಿದ್ದೆ. ಏನೋ ಕಾರಣಕ್ಕೆ ’ಧ್ರುಪದ’ ಶಬ್ದವುಳ್ಳ ಪತ್ರಗಳನ್ನು ಹುಡುಕುವ ಆದೇಶ ಕೊಟ್ಟೆ. ನೋಡುತ್ತಿದ್ದಾಗ ತುಂಬಾ ಹಳೆಯ ಪತ್ರವೊಂದು ಸಿಕ್ಕಿತು. ಇದು ೨೦೦೫ರ ಮೇ, ೪ನೇ ತೇದಿಯಂದು ನಾನು ನನ್ನ ಆತ್ಮೀಯ ಮಿತ್ರನೊಬ್ಬನಿಗೆ ಬರೆದದ್ದು:
Nothing on earth is as divine and soothing as a Dhrupad rendition. This is specially true when someone from the Dagar family does it with utmost efficacy. I am thoroughly grateful!
I strongly recommend Dhrupad to you. It is the purest form of music.
ಮೂರ್ತ ದೇವರುಗಳೂ ಸಹಿಷ್ಣುತೆಯೂ
ನನ್ನದೊಂದು ಥಿಯರಿ ಇದೆ. ಹಿಂದೂ ಧರ್ಮ ಸಾಮಾನ್ಯವಾಗಿ ಉಳಿದ ಬಹುತೇಕ ಧರ್ಮಗಳಿಗಿಂತ ಹೆಚ್ಚು ಸಹಿಷ್ಣುವೂ, ತನ್ನ ವಿರುದ್ಧ ನಡೆಯುವ “ಪಿತೂರಿ” “ಅಪಚಾರ”ಗಳ ಬಗ್ಗೆ ಕಡಿಮೆ ಮುಂಗೋಪಿಯೂ ಆಗಿರುವುದಕ್ಕೆ ಮುಖ್ಯ ಕಾರಣಗಳಲ್ಲಿ ಎರಡು (ವಸ್ತುತ:, ಇವೆರಡೂ ಒಂದಕ್ಕೊಂದು ಸಂಬಂಧಿಸಿದ್ದೇ ಆಗಿವೆ): (೧) ಬಹುದೇವತೆಗಳ ಆರಾಧನೆ (Polythiesm) (೨) ಸಗುಣ ಸಾಕಾರ ಮೂರ್ತ ದೈವತ್ವ (Personal God). ದೇವನೊಬ್ಬ ನಾಮ ಹಲವು, ಅಲ್ಲವೇ? ದೇವನೆಂಬುದೇ ನಿರ್ಗುಣ, ನಿರಾಕಾರವಲ್ಲವೇ? ಇತ್ಯಾದಿ ಪ್ರಶ್ನೆ ವಾದಗಳು ಸಿಂಧುವೇ. ಆದರೆ ನನಗೆ ಇಲ್ಲಿ ಮುಖ್ಯವಾಗಿರುವುದು ಸಾಮಾನ್ಯ ಜನರ ದಿನನಿತ್ಯದ ಆಚರಣೆಗಳಿಗೆ ಒದಗುವ ದೇವರು; ಮೆಟಫಿಸಿಕಲ್ ಗ್ರಹಿಕೆಗಳಲ್ಲ.
(more…)
ನಿಮಗಾಗಿ ಮುಂಜಾವದ ಕಾಫಿಯಂಥ ಕುದಿ
(ಬಹಳ ಮೊದಲಿಗೆ ಬರೆದದ್ದು.)
ಅದು ಶುರುವಾಗುತ್ತದೆ ಪ್ರತಿ ಬೆಳಿಗ್ಗೆ. ಮೊಬೈಲ್ ಫೋನಿನಲ್ಲಿನ ಡಿಜಿಟಲ್ ಸಮಯ. ೬:೩೦. ೭:೧೫. ಅಥವಾ ೭:೪೫. ಎಲ್ಲಾ ಒಂದೇ. ಯಾವುದೇ ಫರಕಿಲ್ಲ. ವರ್ತಮಾನ ಪತ್ರಗಳು ನೇಪಾಳ, ಬಿಎಂಐಸಿ, ಪರಮಾಣು ಒಪ್ಪಂದ ಅಥವಾ ಫ಼ುಟ್ಬಾಲ್ ಬಗ್ಗೆ ಮಾತಾಡುತ್ತವೆ. ಟಿವಿ ಹಳಸಿದ ಸುದ್ದಿಯನ್ನೇ ಇನ್ನೂ ಮಾರುತ್ತಿದೆ. ನಿನ್ನ ಬಾಲ್ಕನಿಯಿಂದ ನಾಕೇ ಅಡಿ ದೂರದಲ್ಲಿರುವ ಸಂಪಿಗೆ ಮರ. ಅದರಲ್ಲಿ ಹೂವರಳಿದ್ದನ್ನು ನಾನು ಎಂದೂ ಕಂಡಿಲ್ಲ. ಎಂದಿನಂತೆ ಸಮಯಕ್ಕೆ ಸರಿಯಾಗಿ ಕೆಳಗೆ ರಸ್ತೆಬದಿಯಲ್ಲಿ ಕಾಣುವ ಮುದುಕಿಯನ್ನು ನೋಡುತ್ತಿದ್ದಂತೆ ಅದು ಮುಂದುವರಿಯುತ್ತದೆ. ಮುದುಕಿ ಎಂದಿನಂತೆ ಅಚ್ಚುಕಟ್ಟು. ನೀಟಾದ ಸೀರೆ. ಹೂ ಮುಡಿದಿದ್ದಾಳೆ. ಆದರೆ ಕೆಳಗಿನ ಮನೆಯವರು ಎಲ್ಲೆಲ್ಲೂ ಹರಡಿದ ಕಸವನ್ನು ಬಳಿದು ತನ್ನ ಗಾಡಿಗೆ ಹಾಕಲು ಒದ್ದಾಡುತ್ತಿದ್ದಾಳೆ. ಅಮ್ಮ ಅವಳನ್ನು ನೋಡಿ ಮರುಕ ಪಡುತ್ತಾಳೆ. “ಎಲ್ಲ ಕಸವನ್ನು ಒಂದು ಪ್ಲ್ಯಾಸ್ಟಿಕ್ ಚೀಲದಲ್ಲಿ ಹಾಕಿ ಒಂದು ದಂಡೆಗೆ ಇಟ್ಟರೆ, ಪಾಪ ಆ ಮುದುಕಿ ಸುಲಭವಾಗಿ ತೊಗೊಂಡು ಹೋಗುತ್ತಾಳೆ,” ಅಷ್ಟು ಮಾಡಲು ಏನು ಧಾಡಿಯೋ ಏನೋ? ಕಸ ಮುಸುರೆಯನ್ನು ಊರ ತುಂಬಾ ಎರಚಾಡುತ್ತಾರೆ.
(more…)

3 comments