ಮನಕ್ಕೆ ನೆನಹಾಗಿ…

ತಲೆಮರೆಸಿಕೊಳ್ಳುವ ಕಲೆ

Posted in translation, ಪದ್ಯ by ಸಂಕೇತ on February 22, 2008

ನನಗೆ ಬಹಳ ಇಷ್ಟವಾಗುವ, ನಾನು ಮೇಲಿಂದ ಮೇಲೆ ಓದುವ ಪದ್ಯವೊಂದನ್ನು ಅನುವಾದಿಸಿದ್ದೇನೆ. ನೋಡಿ. ಮೂಲ ಇಲ್ಲಿದೆ.

’ಗುರುತು ಹತ್ತಲಿಲ್ಲವೇ?’ ಎಂದವರು ಕೇಳಿದಾಗ
ಇಲ್ಲವೆನ್ನಿ.

ಔತಣಕೂಟಗಳಿಗೆ ನಿಮಗೆ ಆಮಂತ್ರಣ ಬಂದಾಗ
ಉತ್ತರಿಸುವ ಮೊದಲು
ಪಾರ್ಟಿಗಳೆಂದರೆ ಹೇಗಿರುತ್ತವೆಂದು ನೆನಪಿಸಿಕೊಳ್ಳಿ:
ಯಾರೋ ತಾನೊಮ್ಮೆ ಪದ್ಯ ಬರೆದಿದ್ದೆನೆಂದು
ಎತ್ತರದ ದನಿಯಲ್ಲಿ ಹೇಳುತ್ತಿರುತ್ತಾರೆ;
ಕಾಗದದ ಪ್ಲೇಟುಗಳ ಮೇಲೆ ಎಣ್ಣೆಯೊಸರುವ ಮಾಂಸದ ಭಜಿಗಳು.
ಈಗ ಹೇಳಿ ನೋಡೋಣ.

ನಾವೊಮ್ಮೆ ಒಟ್ಟಿಗೆ ಸೇರಬೇಕು ಎಂದು ಅವರೆಂದರೆ
ಯಾಕೆಂದು ಕೇಳಿ.

ನಿಮಗೆ ಅವರ ಮೇಲೆ ಅಕ್ಕರೆ ಇಲ್ಲವಾಗಿದೆಯೆಂದಲ್ಲ.
ಮರೆಯಬಾರದಾದಂಥ ಮಹತ್ವದ್ದೇನನ್ನೋ
ನೆನಪಿಸಿಕೊಳ್ಳುವ ಪ್ರಯತ್ನದಲ್ಲಿದ್ದೀರಷ್ಟೇ,
ಮರಗಳು ಅಥವಾ ಇಳಿಹೊತ್ತಿನ ಮಠದ ಗಂಟೆಯ ನಾದ
ಹೊಸ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆಂದು ಹೇಳಿ ಬಿಡಿ.
ಎಂದಿಗೂ ಮುಗಿಯಲಾರದಂಥದ್ದದು.

ಕಿರಾಣಿ ಅಂಗಡಿಯಲ್ಲಿ ಯಾರಾದರೂ ಭೆಟ್ಟಿ ಆದರೆ
ಸುಮ್ಮನೆ ಒಮ್ಮೆ ತಲೆಯಾಡಿಸಿ ಕೋಸುಗಡ್ದೆಯಾಗಿಬಿಡಿ.
ಹತ್ತಾರು ವರ್ಷ ಕಾಣದವರು ಒಮ್ಮೆಲೆ
ಬಾಗಿಲೆದುರು ಉದಯಿಸಿದರೆ
ನಿಮ್ಮ ಹೊಸ ಹಾಡುಪಾಡುಗಳನ್ನು ಬಿಚ್ಚಲು ಹೋಗಬೇಡಿ.
ಕಾಲದೊಂದಿಗೆ ಮೇಳೈಸುವುದು ಸಾಧ್ಯವೇ ಇಲ್ಲ.

ನೀವೊಂದು ಎಲೆಯೆಂಬ ಅರಿವಿನೊಂದಿಗೆ ತುಯ್ದಾಡಿ.
ಯಾವುದೇ ಕ್ಷಣ ಉದುರಬಹುದೆಂಬುದು ಗೊತ್ತಿರಲಿ.
ನಿಮ್ಮ ಸಮಯ ಹೇಗೆ ಕಳೆಯುತ್ತೀರೆಂದು ನಂತರ ನಿರ್ಧರಿಸಿ.

Tagged with: